14.6.09

ಬಂಕರುಗಳಾಚೆಯೂ ಬದುಕಿದೆ!


ಗೊಜಲಿಸದಿರು ಪ್ರಭುವೆ, ನಿನ್ನವೇ ತಂತಿಗಳು
ಮೀರಬಾರದು ತಾನೆ ಗೊಂಬೆ, ಸೋತ್ರಧಾರನನ್ನೇ!
ಜಠರ ಮರೆತಿದೆ ದೊರೆಯೇ, ಅರಿಯೋ ಕಾಯಕವ
ಅಂಬಲಿಸು, ಅತಿಬಲಾ ಮಂತ್ರ...
ಮುದ್ರೆ ನಾಮ ಚಿನ್ಹೆ ಇನ್ನಿತರೇ ನೀನೇ ಮಡಗಿಕೋ
ಮೊದಲು ಬೇಲಿಯದಾಟು; ಬಣ್ಣದ ಕನ್ನಡಕ ಕಿತ್ತೆಸೆ...

ಪಕ್ಕೆಗೊದ್ದು ಹೇಳು
ಮಗನೇ...
ಬಂಕರುಗಳಾಚೆಯೂ ಬದುಕಿದೆ...

15.12.08

ಛಾವಣಿಯ ಬಾವಲಿ



ಸವರು ಕಾಡನು, ಎತ್ತಿಕೋ ಕೋವಿ
ಇಟ್ಟಾಡಿಸಿ ಸುಡು
ತೆವಳಲಿ, ಈಜಲಿ, ಹಾರಲಿ, ಓಡಲಿ;
ಬಿಟ್ಟೀಯ! ಬಲು ತೀಕ್ಷ್ಣ ನಿನ್ನ ಜಠರ ರಸ,
ಪರೀಕ್ಷೆಯಾಗಲಿ ಶಭ್ಧವೇದಿಯ ಗುರಿ
ಬೀಗು ಹೆಡೆಗೇರಿಸಿ ಸಪ್ತವರ್ಣದ ಗರಿ!


ಗವಿ ಕತ್ತಲ ಛಾವಣಿಗೆ ಕುರುಡು ಬಾವಲಿ;
ಹಿಕ್ಕೆ ಮೆಲ್ಲಲು ಕಾದ ಕ್ಷುಧ್ರ ತಳಪಾಯದಲ್ಲಿ,
ಬಿಲವೋ, ಪೊಟರೆಯೋ ಅಲ್ಲೇ ಸಂತಾನವಲ್ಲಿ!
ನೂರು ದೈವಕೂ ಭಿನ್ನ ತಿನ್ನುವಾಹಾರ
ಕೆಲವು ಶಾಖಾಹಾರ, ಕೆಲವು ಮಾಂಸಾಹಾರ...


ಹನಿ ರಕ್ತದೊಳಗೂ ಕಣದ ಗಣ
ಸಹಸ್ರ ನರವ್ಯೂಹ ಜೀನನು ಹಿಡಿದು
ದೇಹಶಾಸ್ತ್ರವ ಶಾಸಿಸುವ ಮಿದುಳು;
ಒಳಗಂಗಾಂಗ ತುಡಿತವನೇ
ನಿರ್ಧರಿಸಲಾರದ ನರಾಧಮ!
ಭೂಮ್ಯಾಕಾಶ ವಸಾಹತು ಬೇಕು...


ಉರಿವಾಗ್ನಿ ಆರಿದರೆ ಅಂಗಳದಿ ಶವ
ಕಣ್ಣೋ, ದೇಹವೋ ದಾನಕ್ಕೆ ಯೋಗ್ಯ
ಆಹಾ ಪುರುಷಾಹಾಂಕಾರ! ಅದು ವರ್ಜ್ಯ;
ಸೀಳು ಎದೆ ಕತ್ತರಿಸಿ ತೆಗೆ ಪೇಸುಮೇಕರ್ರು
ಕಲ್ಲಿರುವ ತಾವಲ್ಲಿ ಸತ್ತ ಹೃದಯ...


ಮನಸ ಮಸೂರದ ಸುತ್ತ
ಕೈಯಾರೆ ಪೊರೆ ಹೆಣೆದೆ ಬುದ್ಧಿಗೇಡಿ;
ಇಲ್ಲದೆಡೆ ಕೆದುಕುತ್ತ ಇಲ್ಲದಾ ಸುಖಃ
ಪರ ಸಂತಸಕೆ ದಿನವೆಲ್ಲ ಕೊರಗಿ ಕೊರಗಿ
ಗೀರು ಕಡ್ಡಿ! ನೆರೆ ಮನೆ ಸುಡುವಾಗ ವಿಕಟಹಾಸ
ಬೂದಿಯಾಗದೇ ಜೊತೆಗೆ ನಿನ್ನದೇ ಮನೆ?

೧೫.೧೨.೨೦೦೮

6.12.08

ನದಿಯ ಸ್ವ"ಗತ"



ಬೀಸಿದ ಬಲೆಗಳಿಗೆಲ್ಲ ಇಲ್ಲವೆನ್ನಲಿಲ್ಲ
ರಾಶಿಯಲಿ ಮತ್ಸ್ಯಜಾಲ
ಆಣೆಕಟ್ಟು ಎಬ್ಬಿಸಿ ತೂಬರೆತೆರೆದರೆ
ನಾಡೆಲ್ಲ ನಾಲಾಜಾಲ

ತೊರೆ, ಜರಿ, ಉಪನದಿ ಹೊಳೆಗೂ
ಸಂಗಮ ಯೋಗ
ಮಲೆ ಹಾಯ್ದು ಹಾರಿ ಜಿಗಿದರೆ
ವಿಹಂಗಮ ಜೋಗ

ನೀವು ಸಾಗರಗಳೂ ಕನಿಕರಿಸಬೇಕು
ನದಿ ಪ್ರೀತಿ ನಿಮ್ಮ ತಾಕಬೇಕು
ನಿಮ್ಮದೇ ನೀರು ಬಿಸಿಲಿಗಾವಿಯಾಗಿ
ಮಳೆಗೆರೆದರೆ ಪಾತ್ರಕ್ಕೆ ನೀರು

ಅರ್ಕಾವತಿ, ವೃಷಭಾವತಿ, ಪಿನಾಕಿನಿ
ಯಾರ ತಪ್ಪಿಗೆ ಇಂಥ ತಲೆದಂಡ?
ಬತ್ತ ಗಂಗೆಯ ಒಡಲ ಮರಳ
ಬಗೆದಿರಿ ಇಂಗಲಾರದಿನ್ನು ನೀರು

ಮಳೆಗಾಲ ನೆರೆ ಹರಿದು
ಬೇಸಿಗೆಗೆ ತೊರೆ ಹರಿದು
ಜೀವ ಜಾಲಕೆ ಉಣಿಸಿ ಉಸಿರು
ಕಡೆಗೆ ಸಾಗರದಲೇ ಐಕ್ಯ

ನೆನಪ ಪಳಿಯುಳಿಕೆ


ನೆನಪ ಪಳಿಯುಳಿಕೆಯಲಿ
ಅವಳ ಹೆಜ್ಜೆಯ ಅಚ್ಚು
ತಾಕಿದಾಗಲೆಲ್ಲ ನನಗೆ ಪುಳಕ

ನೆಲ ಮೋಡ ಸರಸಕೆ
ಎದೆ ಗದ್ದೆ ಬೈಲು ಒದ್ದೆ ಒದ್ದೆ
ನೆಂದಾಳೋ, ನೆಗಡಿಯೋ! ಅಳುಕು

ಹಳ್ಳಿ ದಾರಿಯಲಿ ನೆರಿಗೆ ಲಂಗವ
ಒದೆದು ನಡೆವವಳ ಕಾಲ್ಗೆಜ್ಜೆ ಗಲುಕ
ಸದ್ಧಿನ್ನೂ ಕಿವಿಯಲಿ ಸ್ಥಭ್ಧ

ಕಬ್ಬು ಜಲ್ಲೆಯ ಸೀಳಿ ಸೀಳಿ
ಅಗೆದಗೆದು ರಸ ಹೀರಿದಾಗ
ನಾನೇ ಕಬ್ಬಂತಾಗೋ ಪುಳಕ

ಅವಳಿಗೂ ನೆನಪೆತ್ತರದ ಮಗ
ನಕ್ಕಾಗ ಅದೇ ಕೆನ್ನೆಗುಂಡಿ
ಕೆಲ ಚಿತ್ರಗಳೇ ಹಾಗೆ ಚೆನ್ನ ಚೌಕಟ್ಟಿನೊಳಗೆ!

ಶಂಕರ್ ನಾಗ್


ಏನಿತ್ತು ಮನದೊಳಗೆ
ಕನಸುಗಳ ಪರಿಷೆ?
ಎಂಥ ತುದಿ ನಿಲುಕಿಗೆ
ಹಂಬಲಿಸಿ ನೀ ಮಿಡಿದೆ?
ಮನವು ಜಂಗಮದಂತೆ
ನನಸು ಸ್ಥಾವರದಂತೆ
ಉಳಿವನೊಬ್ಬನೇ ನೀ ಶಂಕರ!

(೧೯.೧೦.೨೦೦೮ ರಂದು ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾದ
’ಬೆಳ್ಳಿ ಚುಕ್ಕಿ’ ಕಾರ್ಯಕ್ರಮದ ಶಂಕರ್ ನಾಗ್ ವಿಶೇಷಕ್ಕೆ
ಶ್ರೀ. ಆರ್.ಜಿ. ಹಳ್ಳೀ ನಾಗರಾಜ್ ಬರೆಸಿದ್ದು)

ಮುಂಬೈ ರಕ್ಕಸ ತಂಗಡಿ


ಕುಡಿಕೆಯೊಳೇ ಮೊಳಕೆ
ಕುಡಿಕೆಯೊಳೇ ಸಂಗ್ರಹ
ಕಡೆಗೆ ಹಿಡಿ ಚಿತಾಭಸ್ಮ
ಯಾವುದಿದೆ ಆ ಧರ್ಮ
ಚಿರಂತನ ಭ್ರಮೆ ಕರ್ಮ
ಅಮೃತವೂ ಕಳ್ಳಭಟ್ಟಿ!

ಮುಕ್ಕಾಲು ಗೋಲಕೂ ಕವಿದ
ಕುಡಿಯಲಾರದ ಉಪ್ಪುಪ್ಪು ನೀರು
ತುಂಡು ನೆಲ ಕೂಪ ಮಂಡೂಕ
ನುಡಿ ಬೇಲಿ ಇನ್ನಿತರೇ ನಜ಼ರು
ಶಿಲ್ಪಿಗೂ ಮರೆಗುಳಿ ಸೃಷ್ಠಿ
ಅಲ್ಪ ಬುದ್ಧಿ ನೆರೆ ಮನೆ ತಂತ್ರ!

ಕಾಯಬಲ್ಲವೇ ಮುರಿದ ಲಾಠಿಗಳು
ಸರಣಿ ಸ್ಫೋಟ, ಬಂದೂಕು ಮೊರೆತ
ಗಗನ ಚುಂಬಿಗೂ ಉಕ್ಕು ಹಕ್ಕಿ ತಿವಿತ
ಅಹಾ! ಹರಾಜು ದೊಡ್ಡ ದೇಶಾಭಿಮಾನ
ಮಡ್ಡಿಗಳೇ, ಊದು ಊದಿಗೂ ಬರೀ ಮರಳೂ
ಫಳ ಫಳಿಸೋ ಗಾಜು ಫಲಕ...

29.11.08

ಉಯ್ಯಾಲೆ... ಜೋಕಾಲೆ...





ನೆಡು ತೋಪು ನಡು ಮರ
ನೆಲ ಮುಗಿಲ ಬೆಸೆದ ಬಂಧ
ಹಗ್ಗದುಯ್ಯಾಲೆ...
ಪಾಳು ಮನಸಿನ ಹಾಳು ಕೊಂಪೆ
ನಡು ಪಡಸಾಲೆ ಜಂತಿಗೆ
ತೂಗುಮಂಚ...

ಮಡಿಲ ಮೆತ್ತೆಯ ಮೇಲೆ
ಪವಡಿಸಲಿ ದೊಗ್ಗಾಲಿ ಕೃಷ್ಙ
ತಟ್ಟು ಕೈ ಲಯಕೆ ಜೋಂಪು
ಕೊರಳ ಜೋಗುಳ ನಾದ
ಮಡಿಲೇ ಕಂದನ ಮೊದಲ ಉಯ್ಯಾಲೆ

ಕೆತ್ತಿ ಮರ ಸಿಂಗರಿಸಿ
ಹಾಸಿ ಒಳಗೊಂದು ಮೆತ್ತೆ
ಹರಿದ ಸೀರೆಯಲೇ ಕಟ್ಟಿ
ಕೈ ಸೋಲುವರೆಗೂ ತೂಗಿದರೂ
ಮತ್ತದೇ ರಂಪ, ರಚ್ಚೆ ಅಳು

ಕಲಿಸಿ ಹಾಲನ್ನ ಉಣಿಸಲು
ತೊದಲುಲಿ ಕಂಕುಳ ಕೂಸ
ತಾಯಿ ಹುಡುಕುವುದದೇ ಜೋಕಾಲಿ
ಬೆತ್ತ, ತೇಗ, ಕಬ್ಬಿಣ ಹೀಗೆ
ಅವರ ಬಂಡವಾಳಕೆ ತಕ್ಕ ಉಯ್ಯಾಲೆ

ಉತ್ಸವ ಮೂರ್ತಿಗೆ ಬಂಗಾರದುಯ್ಯಾಲೆ
ಧಣಿಗೆ ಬಿಸಿಲಮಚ್ಚೆಯ ರಸಿಕ ಉಯ್ಯಾಲೆ
ಬಡವನಿಗೆ ತುಕ್ಕಿಡಿದ ಉಧ್ಯಾನದುಯ್ಯಾಲೆ
ಬೇಡದ ಮುದಿ ಜೀವ ಬಿದ್ದುಕೊಳ್ಳಲು
ನಡು ಮನೆ ಅರೆ ಕತ್ತಲ ತೂಗುಮಂಚ

ದೇವರದ್ದೋ? ದೆವ್ವದ್ದೋ? ತೂಗುವಾ ಕೈಯಿ?
ತೂಗು ತೂಗಿಗೂ ಅದು ಏರು ಮುಖಿ
ಜೀಕಿಗೂ ತಮ್ಮ, ನೆರೆಳು ಹಿಂಜೀಕು
’ನೈನಂ ಛಿಂಧ್ರಂತಿ ಶಸ್ತ್ರಾಣಿ’
ಮುಕ್ತಿಗಾಮಿನಿ ಜೋಕಿಲಿ ಬದುಕ ಸಂಕೇತ!

- ಬದರಿನಾಥ ಪಲವಳ್ಳಿ
ಬೆಂಗಳೂರು

7.9.08

ಸಂಧ್ಯಾ ರಾಗ...



ಹೊರಟು
ನಿಂತಿರೇ ದೊರೆ...
ಇರುಳು ಕರಗಿತೇ ಇಷ್ಟು ಬೇಗ?
ಒಂದೂ ಮಾತಿರಲಿಲ್ಲ
ಬೆಸೆದ ಮನಗಳ ನಡುವೆ; ಹೆಪ್ಪುಗಟ್ಟಿತ್ತು ಮೌನ
ಮತ್ತೆ ಮೊದಲಂತಿರಲಿಲ್ಲೇಕೆ?
ಪ್ರೇಮ ಬಾಂದಳದಲ್ಲಿ ಪ್ರಣಯ ಹಕ್ಕಿ

ಸಾವಿರ ಬೇಸಿಗೆಗಳಲ್ಲಿ ತಂಪಾಗಿ ಇದ್ದೇನು
ನಿಮ್ಮಾಣೆ!
ಮಂಜಿಗಿಂತಲು ತಂಪು ನಿಮ್ಮ ನೆನಹು
ಹಾಸಿಟ್ಟ ಗರಿ ಗರಿ ಚಾದರಕ್ಕೇನು ಗೊತ್ತು
ಇನ್ನೆಷ್ಟು ಹೊತ್ತು ಈ ಬಿನ್ನಾಣ
ಮುಡಿದ ಮಲ್ಲಿಗೆಗೂ ಗೊತ್ತೆ ತನ್ನ ಅಂತ್ಯ?

ದೊರೆ!... ಮುಂಜಾವಿನ ಕಲರವದಷ್ಟೇ
ಗೋಧೂಳಿ ಸಮಯಕೂ ನನ್ನ ನಿಷ್ಠೆ
ಅದು ಎಂದೋ ಹಚ್ಚಿಟ್ಟ ನಂದಾದೀಪ

ಸಂತೃಪ್ತ ನನ್ನ ಕಣ್ಣಾಲಿಗಳಲ್ಲಿ,
ಚಕ್ರತೀರ್ಥ
ನಿಮಗೋ ಬರುವ ಮಾರ್ನವಮಿಗೆ ಪೂರಾ ಎಂಬತ್ತು
ಎಂಟು ಹೆತ್ತವಳು ನಾನು, ಅವಕ್ಕೆ ಮತ್ತೂ ಅವಕ್ಕೆ
ಎಣಿಸಿದರೆ ಹೋದ ಷಷ್ಠ್ಯಬ್ಧಿಗೆ ನೂರ ಹನ್ನೊಂದು

ಮತ್ತವೇ ಚಿತ್ರಗಳು,
ನಾನು ಹಾರ್ಮೊನಿಯಂ ಮುಂದೆ
ನೀವು ಅವರೇಕಾಳು ಉಪ್ಪಿಟ್ಟಿನ ಮುಂದೆ
ತುಟಿ ಅಂಚಲೆಂತದೋ ತುಂಟ ನಗೆ
ತಿಂಗಳೊಪ್ಪತ್ತನಲ್ಲಿ
ನನ್ನ ಮನೆಯಂಗಳದಿ ಚಪ್ಪರ!

(ಹಾಯ್ ಬೆಂಗಳೂರ್! ವಾರ ಪತ್ರಿಕೆಯ ಜೂನ್ ೧, ೨೦೦೧ ನೇ ಸಂಚಿಕೆಯಲ್ಲಿ ಪ್ರಕಟಿತ)

6.9.08

ಆಲಿಪ್ತ ನಿಮಿಷ


ನೀನು ಕದ್ದ ಹೃದಯವನೊಮ್ಮೆ

ಕಿವಿಗೊಟ್ಟು ಕೇಳು

ಅದರೊಳಗು ಮಿಡಿಯುತಿಹ ನಿನ್ಹೆಸರ

ಕವನ ಸಂಕಲನವನೊಮ್ಮೆ

ಓದಿ ನೋಡು..


ಹತ್ತು ವರುಷಗಳಿಗೂ ಮಿಗಿಲು

ನಲ್ಲೆ ಈ ಪ್ರೇಮ ಸಿಂಧು

ದಕ್ಕಿದರಪಾವು ನಿಮಿಷಕೂ

ಹಬ್ಬಿ ಬದುಕೆಲ್ಲಾ ಗಂಧದಂತೆ

ಅರೆದುಕೊಂಡಿತೀ ಕವಿತೆ ಇಂತು...

ಗಳಿಗೆ ಎಲ್ಲೋ ಕಳೆದು ಅಂತರಂಗ

ಮರೆತು ನತೆಸುವ ನೆನಪ ಸಂಗ

ಅರಗಳಿಗೆ ಮರುಗುಳಿ ಅಂತರಾತ್ಮ

ನೆನೆಹುದೆಲ್ಲವು ಅಮೃತಮಯ

ನೂರು ಜನ್ಮದ ಬಂಧ..

- ಬದರಿನಾಥ ಪಲವಳ್ಳಿ

೨೭.೦೨.೨೦೦೮

ನಮ್ಮ ಕಾವಲಿಯೇ ತೂತು!



ನೇಣಿಗೆ
ಬೀಳೋ
ಚಿತ್ರ ಪಟಕೂ ಗೋಡೆ ಒಂದಿರಬೇಕು
ಬಣ್ಣ ಮಾಸಲಿರಬೇಕು!
ಯಾರದೋ ಶುಕ್ರ ತಿವಿತಕೆ ಸಿಕ್ಕು
ಅಂಡಾಣು ಫಲಿಸಿದರೆ
ಪಿತೃ ಸುಖಃ ಅನುಭವಿಸಬೇಕು..

ಯಾವುದು ಹಾಲೋ? ಆಲ್ಕೋಹಾಲೋ?
ಇವರ ಶರಾಬಿನ ಬಟ್ಟಲಿಗೆ
ನಮ್ಮ ಬೆವರಿನ ಲೆಕ್ಕ ಜಮಾಬಂದಿ..
ಸುರಿವ ಮಳೆ ನೀರೆನಿತು ನದಿ ಕೊಳ್ಳ ಪಾಲು?
ಮತ್ತೆ ಭಾಷ್ಪಕೆ ಸಂದು ಮೋಡವಾಗಿ
ಮಳೆಗೆರೆವುದೆಲ್ಲಾ ಬರಿ ಕನಸ ಮಾತು!

ಗಿರಿ, ಶಿಖರ, ಬಾನು, ಕೆಂದಾವರೆ, ಹಾಲು ಹುಣ್ಣಿಮೆ
ಕವಿಗೆ ತಾನೇ ತೆವಲು ಪದ ಪದಗಳ ಸಾಲು!
ಬತ್ತಳಿಕೆಯೊಳಗೆ ನೂರ ಬಾಣಗಳಿರಲಿ
ಹೆದೆಗೇರಲಿ ಬೆಟ್ಟದೆತ್ತರದ ಬಿಲ್ಲು
ಮಂತ್ರ ಮರೆತರೆ ಮಿತ್ರ! ಅಲ್ಲೇನಿದೆ,
ರೇಷಿಮೆ ಬರಲು...

ಉತ್ತ ಬೀಜಗಳೆಲ್ಲ ಬೋಧಿ ವೃಕ್ಷಗಳಾದರೆ
ಹಾದಿ ಬೀದಿಗಳಲೂ ಉದ್ಭವ ಗೌತಮ ಬುದ್ಧರು!

೦೨.೦೯.೨೦೦೮

ಸಿಂಗ್ಪೂರ್ ಕಣ್ರಿ - ನಮ್ಮ ಬೆಂಗಳೂರು!




ತಳತಳನೆ ಹೊಳೆವ ಎಂ.ಜಿ. ರೋಡು;
ಸೀಳಿಕೊಂಡು ಬ್ರಿಗೇಡ್ ರೋಡು,
ಹೆಜ್ಜೆಗೊಂದು ಪಬ್ಬು-ಬಾರು;
ಗಲ್ಲಿಗೊಂದು ಸೈಬರು...

ಒನ್ ವೇಗಳ ಕಾರಾಮತ್ತು;
ಮೇಲೆ ಫ್ಲೈ ಓವರ್ರು,
ಎಡಕ್ಕೆ ಪೇ-ಅಂಡ್-ಪಾರ್ಕು;
ಬಲಕ್ಕೆ ನಿರ್ಮಲ ಟಾಯ್ಲೆಟ್ಟು-
ಮೂತ್ರಕ್ಕೆ ಬರೀ ಎಂಟಾಣೆ!

ಸಿಗ್ನಲ್ಲಿಗೊಬ್ಬ ಕಿಸೆ ಕತ್ತರಿಸೋ ಟ್ರಾಫಿಕ್ಕು;
ಹೊತ್ತೊಯ್ಯಲಿಕ್ಕೆ ಟೈಗರ್ರು,
ಸದಾ ಸಿಂಗಲ್ ಫೇಸಿನ ಸುಪ್ರಭಾತಕ್ಕೆ
ಮಿಣುಕು ಮಿಣುಕು ಟ್ಯೂಬ್ಲೈಟು,
ಪ್ಲಾಸ್ಟಿಕ್ ಗೊಬ್ಬರ ತಿನ್ನೋ ಬೀದಿ ದನ;
ಹಳ್ಳಕ್ಕೊಂದು ಸಸಿ ನೆಡಿ; ಆಹಾ! ಎಂಥಾ ರೋಡು?

ಸರ್ಕಾರಿ ವಾಹನಗಳಿಗೆ
ಭರಪೂರ ಹೊಗೆ - ರಿಯಾಯತಿ;
ಆನಂದ್ರಾವ್ ಸರ್ಕಲ್ಲಿನಲ್ಲಿ-
ವಾಯುಮಾಲಿನ್ಯ ನಿಯಂತ್ರಣ ಅಳಿಯೋ ಗಾಡಿ!

ಅಬ್ಬಾ ಬೆಂಗ್ಳೂರೇ; ನೀನು ಸಿಂಗ್ಪೂರೇ!

- ಬದರಿನಾಥ ಪಲವಳ್ಳಿ

(ಹಾಯ್ ಬೆಂಗಳೂರ್! ವಾರ ಪತ್ರಿಕೆಯ ಮಾರ್ಚ್ ೧೫, ೨೦೦೨ ನೇ ಸಂಚಿಕೆಯಲ್ಲಿ ಪ್ರಕಟಿತ)

ಎರಡು ಚಿತ್ರಗಳು

ಚಿತ್ರ ಪಟ - ಒಂದು

ಯಾವುದೀ ಓಘ? ಹುಚ್ಚು ಆವೇಗ?
ಎತ್ತ ಸಾಗಿದೆ ಪ್ರಿಯೆ ಬೆಂಗಳೂರು....

ರಾಯರಾಳ್ವಿಕೆಯಲ್ಲಿ ರಾಶಿ ಲೆಕ್ಕದಲಿ
ವಜ್ರ ವೈಢೂರ್ಯ ರತ್ನಾದಿಗಳು..
ನನ್ನ ಕಾಲಕ್ಕೆ; ಕಳ್ಳೇ ಕಾಯಿ ಪರಿಷೆಯಲಿ
ಪ್ರಧ್ಯುಮ್ನ ಬಾಣಕ್ಕೆ ರತ್ನ ಪದ್ಮ ಮೀನಾಕ್ಷಿಯರು!

ರಸಿಕ ಮಣಿಗಳಿಗೆ ಕೆಂಪೇಗೌಡ ಹಿಮಾಲಯ
ಸಭ್ಯರಿಗೆ! ರಾಜ್ಕುಮಾರ ವಿಷ್ಣು ಅಂಬಿ ರಮೇಶ
ಇಷ್ಟ ದೇವತಾ ಕ್ಯಾಲಂಡರಿನ ಹಿಂದೆ
ಸಿಲ್ಕು ಡಿಸ್ಕೋ ಮುಲುಕಿಸೋ ಜನ್ಮಸ್ಥ ಉಡುಗೆ!

ಊರಗಲವಿದ್ದ ಮಸಾಲೆ ದೋಸೆ ಕಾಸಗಲ
ನಲ್ಲಿ ನೀರಿಗೂ ಬ್ರಾಂಡಿನ ಬಿರುಡೆ
ಸುರಿದ ಮಳೆ, ಒಂಥರಾ ಹೆಂಡತಿ ಉಪದೇಶ
ರಾಜ ಕಾಲುವೆಗಳೆಲ್ಲ ಒತ್ತುವರಿ ಈಗ!

ಸಿಗರೇಟು ರಮ್ಮು ಲಲನೆಯ ಕೂಡ; ಎಲ್ಲಿಂದಲೋ ಬಂದವರಿಗೆ
ಅಫೀಮು ಗಾಂಜ ಲೈವ್ ಬ್ಯಾಂಡುಗಳ ತೆವಲು
ನೂರನಲವತ್ತೇಳು ಹುತ್ತಗಳಲೂ ಪರಕೀಯ ಹಾವುಗಳು
ನಮ್ಮ ಬಸ್ಸಲ್ಲೇ ನಾವು ನಿಂತ ಪಯಣಿಗರು!....

ನಗರ ಭೂಪಟಕ್ಕೀಗ ಆನೆ ಕಾಲು ರೋಗ..
ನನ್ನ ಪ್ರಾರಬ್ಧ ಕರ್ಮಕ್ಕೆ,
ಪ್ರಿಯತಮೆ, ಗತ ತ್ರಿಪುರ ಸುಂದರಿ....


***

ಇನ್ನೊಂದು ಚಿತ್ರಪಟ

ಪ್ರೇಯಸಿಯೇ ಬದಲಾದ ಮೇಲೆ
ಕಾಲ ಚಕ್ರಕ್ಕೆ ಸಿಕ್ಕ ನನ್ನ ಹಳ್ಳಿ?

ತಿರು ತಿರುವಿ ಚಕ್ರ; ಮಣ್ಣ ಮುದ್ದೆಗೆ
ಕುಂಬಾರ ಜೀವ ತುಂಬುತಿದ್ದ
ನೇಗಿಲು ಕುಡುಗೋಲು ಗುದ್ದಲಿಗೆ
ಕಮ್ಮಾರ ತಿದಿ ಒತ್ತ ರೂಪ ಕೊಡುತಿದ್ದ..

ವಿಷ್ಣು ಪತ್ನಿ ಬಲು ಕರುಣಾಮಯಿ
ನಿತ್ಯ ಹರಿಧ್ವರ್ಣ ಕಾಡುಗಳು; ಕಾಲ ಕಾಲಕ್ಕೆ ಮಳೆ
ಬಾಳೆ ತೆಂಗು ರಾಗಿ ಜೋಳ ಇನ್ನಿತರೆ..
ಸಮೃದ್ಧ ಫಸಲಿಗೆ ರೈತಾಪಿ ಬೆವರು!

ಪಟ್ಟಣಕ್ಕೊರಟ ಬಸ್ಸುಗಳ ತುಂಬೆಲ್ಲ
ಹಳ್ಳಿ ಹೈಕಳದ್ದೇ ಗಂಟು ಮೂಟೆ..
ಊರಿಗೆ ಊರೇ ಗುಳೆ ಎದ್ದ ಮೇಲೆ
ಸಾವಿತ್ರಮ್ಮನ ಗದ್ದೆಗೆ ಆಳುಗಳ ಬರ!

ಯಾವುದೋ ಹುಚ್ಚು ಸೆಳೆತಕೆ ಸಿಕ್ಕು
ನೆಲದ ಬೆಲೆ ಅಂಬರಕ್ಕೇರಿ
ತುಂಡು ರೈತರಿಗೆಲ್ಲಾ ಕಾರು ಬಾರು
ಉಂಡದ್ದೆಲ್ಲಾ ಬಿರಿಯಾನಿ, ಕಬಾಬು!

ಯಾರು ಬೆಳೆಯುತ್ತಾರೆ ನಾಟಿ-ಗೀಟಿ ಮಾಡಿ ಎಲ್ಲಾ?
ಉಂಡು ಮಜಾ ಮಾಡಿದ ಮೇಲೆ; ಇದ್ದದ್ದೇ ಬಿಡಿ,
ಸರ್ಕಾರದ ಸಾಲ ಮನ್ನಾ!

- ಬದರಿನಾಥ ಪಲವಳ್ಳಿ
೦೬ ಸೆಪ್ಟೆಂಬರ್ ೨೦೦೮